ಅಟಲರಿಂದ… ತಳಮಳಲಾ ಸಾಗರದ… ಸಾವರ್ಕರ್ ಮಾನೇ ತೇಜ್, ಸಾವರ್ಕರ್ ಮಾನೇ ತ್ಯಾಗ್, ಸಾವರ್ಕರ್ ಮಾನೇ ತಪ್, ಸಾವರ್ಕರ್ ಮಾನೇ ತತ್ತ್ವ್, ಸಾವರ್ಕರ್ ಮಾನೇ ತರ್ಕ್, ಸಾವರ್ಕರ್ ಮಾನೇ ತಾರುಣ್ಯ್, ಸಾವರ್ಕರ್ ಮಾನೇ ತೀರ್, ಸಾವರ್ಕರ್ ಮಾನೇ ತಲ್ವಾರ್, ಸಾವರ್ಕರ್ ಮಾನೇ ತಿಲ್ಮಿಲಾಹಟ್

ಋಷಿಗಳು ಯಾವುದನ್ನು ಮುಕ್ತಿ-ಮೋಕ್ಷವೆಂದು ಬಗೆದರೋ; ಯೋಗಿಗಳು, ವೇದಾಂತಿಗಳು ಯಾವುದನ್ನು ಪರಬ್ರಹ್ಮ ಎಂದು ಭಾವಿಸಿದರೋ; ಅದನ್ನೇ ‘ಸ್ವಾತಂತ್ರ್ಯ’ ಎಂದು ಹೃದ್ಯಪದ್ಯವಾಗಿ ಹರಿಸಿದ ಶ್ರೀ ವಿನಾಯಕ ದಾಮೋದರ್ ಪಂತ್ ಸಾವರ್ಕರ್ ಅವರು ಸ್ವಾತಂತ್ರ್ಯದ ಮಹಾನ್ ಆರಾಧಕರಾಗಿದ್ದರಲ್ಲದೇ, ಸ್ವಾತಂತ್ರ್ಯವನ್ನು ದೈವತ್ವದ ಪಟ್ಟಕ್ಕೇರಿಸಿ, ಸ್ವಾತಂತ್ರ್ಯ ದೇವಿಯ ನಿತಾಂತ ಆರಾಧಕರಾಗಿದ್ದರು.
“We want freedom by any means, not by prayers but by struggle” – ಎಂಬುದು ಸಾವರ್ಕರ್ ಅವರ ಗಟ್ಟಿ ನಿಲುವಾಗಿತ್ತು.
ಸ್ವಾತಂತ್ರ್ಯವೀರ ಸಾವರ್ಕರ್ ಅವರು ಶ್ರೀಕೃಷ್ಣನ ‘ಬುದ್ಧಿಯೋಗ’ವನ್ನು ತಮ್ಮ ಚಾರಿತ್ರ್ಯದಲ್ಲಿ ಅಳವಡಿಸಿಕೊಂಡಿದ್ದರು. ಇದೇ ಕಾರಣಕ್ಕಾಗಿ ಅವರು ಭಾರತದ ಸ್ವಾತಂತ್ರ್ಯ ಹೋರಾಟವನ್ನು, ಬ್ರಿಟಿಷರ ಮೂಲನೆಲೆಯಾಗಿದ್ದ ಲಂಡನ್ನಿಂದಲೇ ಆರಂಭಿಸಿದರು. ಸಾಮಾನ್ಯ ಜನರು ಹಾಗಿರಲಿ, ಬಿ.ಜಿ. ತಿಲಕ್, ಜಿ.ಕೆ. ಗೋಖಲೆ, ಎಂ.ಕೆ. ಗಾಂಧಿ ಮತ್ತು ನೆಹರೂ ಅವರಂತಹ ಖ್ಯಾತ ನಾಯಕರೂ ಸಹ ಲಂಡನ್ನಲ್ಲಿ ಏನೂ ಮಾಡಲು ಸಾಧ್ಯವಿಲ್ಲವೆಂದು ಭಾವಿಸಿ ನಿಷ್ಕ್ರಿಯರಾಗಿ ಕುಳಿತಿದ್ದ ಸಮಯದಲ್ಲಿ ಸಾವರ್ಕರ್ ಅವರು ಭಾರತ ಸ್ವಾತಂತ್ರ್ಯ ರಣ ಕಹಳೆ ಊದಿದ್ದರು.
ಎರಡು ಜೀವಾವಧಿ ಶಿಕ್ಷೆಯೆಂದರೆ ಐವತ್ತು ವರ್ಷಗಳ ಕಾಲ ಸಾವರ್ಕರ್ ಅಂಡಮಾನಿನ ಕಾರಾಗೃಹದಲ್ಲಿ ಕೊಳೆಯಬೇಕಿತ್ತು. ಅಂಡಮಾನಿನ ಜೈಲು ಅತ್ಯಂತ ಘೋರ ಹಾಗೂ ಅಮಾನುಷ ಕಾರಾವಾಸ ಶಿಕ್ಷೆ, ‘ಕರಿನೀರಿನ ಶಿಕ್ಷೆ’ ಎಂದೇ ಕುಪ್ರಸಿದ್ಧವೂ ಆಗಿತ್ತು. ಅಷ್ಟಕ್ಕೇ ನಿಂತಿತೇ? ಇಲ್ಲ! ಅವರ ಆಸ್ತಿಪಾಸ್ತಿಗಳನ್ನೆಲ್ಲ ಸರಕಾರವು ಮುಟ್ಟುಗೋಲು ಹಾಕಿತು. ಹೆಂಡತಿ, ತಮ್ಮ, ತಂಗಿ, ಅತ್ತಿಗೆ ಎಲ್ಲರಿಂದ ಹತ್ತಾರು ವರ್ಷ ದೂರವಿರಬೇಕಾಯಿತು.
ಅಂದಿನ ಬ್ರಿಟಿಷ್ ಸರ್ಕಾರವು ಒಂದಲ್ಲ, ಎರಡು ಜೀವಾವಧಿ ಶಿಕ್ಷೆ ವಿಧಿಸಿದಾಗ ತಾತ್ಯಾ ಸಾವರ್ಕರ್ (ಸಾವರ್ಕರರ ಮುದ್ದಿನ ಹೆಸರು) ಹೀಗೆ ಉದ್ಗರಿಸಿದ್ದರಂತೆ: “ಓಹೋ, ಆಂಗ್ಲರಿಗೂ ಹಿಂದೂಗಳ ಪುನರ್ಜನ್ಮದಲ್ಲಿ ನಂಬಿಕೆ ಇದೆ ಎಂದಂತಾಯ್ತು. ಎರಡು ಜೀವಮಾನಗಳ ಅವಧಿಯ ಶಿಕ್ಷೆ ವಿಧಿಸಿದುದೇ ಅದಕ್ಕೆ ನಿದರ್ಶನ.”
ಸಾವರ್ಕರರು ಕಲಿಯಷ್ಟೇ ಅಲ್ಲ, ಉತ್ತಮ ಕವಿಯೂ ಆಗಿದ್ದರು. ಕಾರಾವಾಸದಲ್ಲಿ ಕಾಗದ, ಪುಸ್ತಕ, ಲೇಖನಿ ಕೊಡದಿದ್ದರೂ, ಕಟ್ಟಿ ಹಾಕಿದ್ದ ಸರಪಳಿಯ ಮೊಳೆಯಿಂದಲೇ ಗೋಡೆಯ ಮೇಲೆಯೇ ಕವನ, ಕಾವ್ಯಗಳನ್ನು ರಚಿಸಿ, ಸತತ ಓದಿ, ಮನನ ಮಾಡಿ ಗಟ್ಟಿಮಾಡಿಕೊಳ್ಳುತ್ತಿದ್ದರು. ಅಂತಹಾ ಮೇಧಾವಿ ಹಾಗೂ ಹಠವಾದಿ.
ಜಯೋಸ್ತುತೇ ಶ್ರೀ ಮಹನ್ಮಂಗಲೇ ಶಿವಾಸ್ಪದೇ ಶುಭದೇ |
ಸ್ವತಂತ್ರತೇ ಭಗವತಿ ತ್ವಾಮಹಂ ಯಶೋಯುತಾಂ ವಂದೇ ||
“Hindutva is not a mere name, nor a sect, nor a religion. It is the essence of being Hindu”.
“ಹಿಂದುತ್ವ ಎಂಬುದು ಕೇವಲ ಒಂದು ಹೆಸರಲ್ಲ, ಒಂದು ಪಂಥವೂ ಅಲ್ಲ, ಒಂದು ಮತವೂ ಅಲ್ಲ, ಅದು ಹಿಂದುವಾಗಿರುವುದರ ಸಾರವಾಗಿದೆ.”
ಅಂಥಾ ಕಾರಾವಾಸದಲ್ಲಿರುವಾಗಲೂ ಅವರು ಧೃತಿಗೆಡದೇ, ಎಲ್ಲ ಕ್ರೌರ್ಯ ಸಹಿಸಿಯೂ, ತನ್ನೊಂದಿಗೆ ಸೆರೆವಾಸದಲ್ಲಿದ್ದವರೊಂದಿಗೆ ಸದಾ ಪ್ರೀತಿಯಿಂದ ವರ್ತಿಸಿ ಅವರ ಪ್ರೇಮ, ಅಭಿಮಾನ ಗಳಿಸಿಕೊಂಡಿದ್ದರು. ಅವರು ಭಾರತ ಇತಿಹಾಸದ, ಪರಂಪರೆಯ ಕಥೆಗಳನ್ನು ಹೇಳುತ್ತಿದ್ದರಂತೆ.
ಸೆರೆಯಾಳುಗಳಲ್ಲಿ ಹಿಂದೂ, ಮುಸ್ಲಿಂ ಎಲ್ಲರೂ ಇದ್ದರು. ಹಾಗಾಗಿ ಅಕಸ್ಮಾತ್ ಯಾವುದಾದರೂ ಒಬ್ಬ ಹಿಂದೂ ಖೈದಿ ಮುಸಲ್ಮಾನನ ತಟ್ಟೆ ಮುಟ್ಟಿದನೆಂದರೆ ಉಳಿದೆಲ್ಲ ಹಿಂದೂಗಳು ಆತನನ್ನು ಜಾತಿಬಾಹಿರನನ್ನಾಗಿ ಮಾಡುತ್ತಿದ್ದರು. ಹೀಗಾಗಿ ಅಂಥವರು ಮುಸಲ್ಮಾನರಾಗಿ ಬಿಡುತ್ತಿದ್ದರು, ಮೇಲಾಗಿ ಜೈಲಿನ ಅಧಿಕಾರಿಗಳೂ ಸಹ ಮುಸಲ್ಮಾನ ಸೆರೆಯಾಳುಗಳೊಂದಿಗೆ ಮೃದು ಧೋರಣೆ ತಳೆಯುತ್ತಿದ್ದರು. ಸಾವರ್ಕರರು ಮುಸಲ್ಮಾನರು ತಟ್ಟೆ ಮುಟ್ಟಿದೊಡನೆ ಹಿಂದುತ್ವ ಹೋಗುವುದಿಲ್ಲ, ಹಾಗಾಗಿ ಹಿಂದುತ್ವದಿಂದ ಹೊರಗೆ ಹೋದವರನ್ನೆಲ್ಲ ಮತ್ತೆ ಹಿಂದೂಗಳೆಂದು ಅಂಗೀಕರಿಸುವಂತೆ ಸಹ ಸೆರೆಯಾಳುಗಳ ಮನವೊಲಿಸಿದರು. ಮುಸಲ್ಮಾನ ಖೈದಿಗಳಿಗೆ ಮಾತ್ರ ನಮಾಜ್ ಮಾಡಲು ಇದ್ದ ಅವಕಾಶವನ್ನು ಹಿಂದೂ ಸೆರೆಯಾಳುಗಳಿಗೆ ಸ್ತೋತ್ರ, ಪ್ರಾರ್ಥನೆಗಳನ್ನು ಕಲಿಸುವಲ್ಲಿಗೂ ವಿಸ್ತರಿಸಲು ಕಾರಣರಾದರು. ಸಮಯಾವಕಾಶ ಕೊಡಲು ಆಂಗ್ಲ ಅಧಿಕಾರಿಗಳು ನಿರಾಕರಿಸಿದಾಗ, ಸತ್ಯಾಗ್ರಹ ಹೂಡಿ ನಿತ್ಯ ಪಾರಾಯಣಕ್ಕಾಗಿ ಸಮಯವನ್ನು ದೊರಕಿಸಿಕೊಂಡರು.
ಏಟಿಗೆ ಎದುರೇಟು (tit-for-tat) ತತ್ತ್ವವನ್ನು ಅಳವಡಿಸಿಕೊಳ್ಳುವ ಮೂಲಕ, ಅವರು ಅಂಡಮಾನ್ನ ಸೆಲ್ಯುಲಾರ್ ಜೈಲಿನ ಜೈಲರ್ ಮಿಸ್ಟರ್ ಬಾರಿಯ ಕ್ರೌರ್ಯವನ್ನು ಹತೋಟಿಗೆ ತಂದರು. ಅವರು ಈ ಚಟುವಟಿಕೆಯಲ್ಲಿ ತೊಡಗಿದ್ದಾಗ, ಇಂಗ್ಲೆಂಡ್ ಮತ್ತು ಜರ್ಮನಿಯ ನಡುವಿನ ಯುದ್ಧದ ಬಗ್ಗೆ ಕೇಳಿದರು. ಈ ಅವಕಾಶದ ಲಾಭವನ್ನು ಪಡೆದುಕೊಂಡು ಭಾರತವು ಸ್ವಾತಂತ್ರ್ಯವನ್ನು ಪಡೆಯಬಹುದು ಎಂದು ಅರಿತುಳ್ಳುತ್ತಾ ಜೈಲಿನಿಂದ ತಪ್ಪಿಸಿಕೊಳ್ಳುವ ಯೋಜನೆಯನ್ನೂ ಸಿದ್ಧಪಡಿಸಿಕೊಂಡರು.
ಅವರು ಎಲ್ಲ ರಾಜಕೀಯ ಖೈದಿಗಳಿಗೆ ಬ್ರಿಟಿಷ್ ಸರ್ಕಾರಕ್ಕೆ ಶರಣಾಗಲು, ದೇಶದ ಹಿತಾಸಕ್ತಿಗೆ ಧಕ್ಕೆಯಾಗದ ಸರ್ಕಾರದ ಷರತ್ತುಗಳನ್ನು ಒಪ್ಪಿಕೊಳ್ಳಲು ಮತ್ತು ಬಿಡುಗಡೆಯಾದ ತಕ್ಷಣ ದೇಶಕ್ಕಾಗಿ ಕೆಲಸ ಮಾಡಲು ಸಲಹೆ ನೀಡಲಾರಂಭಿಸಿದರು. ಆದರೆ ಖೈದಿಗಳು ಅದನ್ನು ‘ಕುಕರ್ಮ’ ಎಂದು ಭಾವಿಸಿ ಶರಣಾಗಲು ನಿರಾಕರಿಸಿದರು. ಆಗ ಅವರು ಕೃಷ್ಣ ಭಗವಾನ, ಶಿವಾಜಿ ಮಹಾರಾಜರ ಉದಾಹರಣೆಗಳನ್ನು ನೀಡುತ್ತಾ ವಿಷಯ ಮನದಟ್ಟು ಮಾಡಿಸುತ್ತಿದ್ದರು. ಇದರ ಪರಿಣಾಮವಾಗಿ, ಎಲ್ಲ ರಾಜಕೀಯ ಖೈದಿಗಳೂ ಬಿಡುಗಡೆಯಾದರು. ದುರದೃಷ್ಟವಶಾತ್, ಬ್ರಿಟಿಷ್ ಸರ್ಕಾರವು ಸಾವರ್ಕರ್ ಸಹೋದರರನ್ನು ಬಿಡುಗಡೆ ಮಾಡಲಿಲ್ಲ. ಆದರೂ, ಅವರು ಜೈಲಿನಲ್ಲಿ ಮಹಾಕಾವ್ಯವನ್ನು ಬರೆಯುವುದರಲ್ಲಿ ತೊಡಗಿಸಿಕೊಂಡರು.
ರತ್ನಾಗಿರಿ ಜೈಲಿನಲ್ಲಿ ಮತ್ತು ನಂತರದ ಗೃಹಬಂಧನದಲ್ಲಿ ಯಾವುದೇ ಕೆಲಸ ಮಾಡುವುದು ಅಸಾಧ್ಯವಾಗಿತ್ತು. ಆದರೂ ಸಾವರ್ಕರ್ ಆ ಅಕರ್ಮದಲ್ಲೂ ಕರ್ಮವನ್ನು ಕಂಡರು. ಅವರು ಹಿಂದೂಧರ್ಮ ಮತ್ತು ರಾಜಕೀಯ ತತ್ತ್ವಶಾಸ್ತ್ರಗಳ ಕುರಿತು ಪುಸ್ತಕಗಳನ್ನು ಬರೆದರು. ದೇಶಪ್ರೇಮವನ್ನು ಜಾಗೃತಗೊಳಿಸುವ ದೇಶಭಕ್ತಿ ಗೀತೆಗಳನ್ನು ಬರೆದರು ಮತ್ತು ಅವುಗಳನ್ನು ರಹಸ್ಯವಾಗಿ ಹೊರಗೆ ಕಳುಹಿಸಿ ಪ್ರಕಟಿಸುವಲ್ಲಿಯೂ ಯಶಸ್ವಿಯಾದರು!
“ಯಾರಿಗೆ ಅಹಂಕಾರವಿಲ್ಲವೋ, ಸ್ವಾರ್ಥದ ಉದ್ದೇಶವಿಲ್ಲವೋ ಮತ್ತು ಯಾರ ಬುದ್ಧಿಯು ಪ್ರಕಾಶಿಸುತ್ತಿದೆಯೋ, ಅಂತಹವನು ಯಾರನ್ನು ಕೊಂದರೂ ಅದು ಕೊಲೆಯಾಗುವುದಿಲ್ಲ ಮತ್ತು ಅವನಿಗೆ ಯಾವುದೇ ಪಾಪ ತಟ್ಟುವುದಿಲ್ಲ” – ಭಗವದ್ಗೀತೆಯ 18 ನೇ ಅಧ್ಯಾಯದ 17 ನೇ ಶ್ಲೋಕದಲ್ಲಿ ಕೃಷ್ಣ ಹೇಳಿದ್ದಾನೆ.
ಕೃಷ್ಣನ ಈ ಉಪದೇಶವು ಸಾವರ್ಕರ್ ಅವರ ಆಲೋಚನೆಗೆ ಹೊಂದಿಕೆಯಾಗುತ್ತದೆ. ಶತ್ರುವನ್ನು ಕೊಲ್ಲುವುದು ಹಿಂಸೆಯಲ್ಲದ್ದರಿಂದ ಕೃಷ್ಣನು ಅರ್ಜುನನಿಗೆ ತನ್ನ ಶತ್ರುಗಳನ್ನು ಕೊಲ್ಲಲು ಉಪದೇಶಿಸಿದನು.
ಅಹಿಂಸೆ ಎಂದರೆ ಯಾವುದೇ ಕೊಲೆಯನ್ನು ಮಾಡದಿರುವುದು ಎಂದಲ್ಲ, ಬದಲಿಗೆ ಅನಿವಾರ್ಯವಾದಾಗ ಮಾತ್ರ ಕೊಲ್ಲುವುದು ಎಂದರ್ಥ. ಅಹಿಂಸೆಯನ್ನು ಪುನಃಸ್ಥಾಪಿಸಲು, ಸಜ್ಜನರನ್ನು ನಿರ್ದಯವಾಗಿ ಹತ್ಯೆಗಯ್ಯುವವರನ್ನು ಸಂಹರಿಸಲೇಬೇಕೆಂಬ ವಿಚಾರ ಪ್ರತಿಪಾದನೆ ಸಾವರ್ಕರ್ ಅವರಿಗಿತ್ತು. 1940ರ ಸುಮಾರಿಗೆ, ಪುಣೆಯ ಭಾಷಣವೊಂದರಲ್ಲಿ ಅವರು ಅತಿರೇಕದ ಅಹಿಂಸೆ ಎಂದಿಗೂ ಧರ್ಮವಲ್ಲ, ಅದು ಸಂಪೂರ್ಣ ಅಧರ್ಮ ಎಂದು ಹೇಳಿದರು. ರಾಷ್ಟ್ರ, ದೇಶ, ಸಮಾಜ ಮತ್ತು ಮಾನವೀಯತೆಯನ್ನೇ ನಾಶಮಾಡುವ ಯಾವುದೇ ಕ್ರಿಯೆಯು ಧರ್ಮದ ಪ್ರಕಾರ ಇರಲು ಸಾಧ್ಯವೇ ಇಲ್ಲ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು.
ದೇವಸ್ಥಾನದೊಳಗೆ ಕೆಲವು ಪಂಗಡದ ಜನರನ್ನು ಬಿಡುವುದು ತಪ್ಪು ಎಂದು ಪರಿಗಣಿಸಲಾಗುತ್ತಿದ್ದ ಕಾಲದಲ್ಲಿ ಅವರು ಅಸ್ಪೃಶ್ಯರಾದಿಯಾಗಿ ಎಲ್ಲ ಜನರನ್ನೂ ದೇವಸ್ಥಾನದೊಳಕ್ಕೆ ಕರೆದೊಯ್ಯುವ ಸಾಹಸ ಮಾಡಿದರು. ರತ್ನಾಗಿರಿಯ ಅಕರ್ಮದ ಪರಿಸ್ಥಿತಿಯಲ್ಲೂ ಸಾವರ್ಕರ್ ಅವರು ಅಸ್ಪೃಶ್ಯತೆ ನಿವಾರಣೆಯ ಮಹತ್ಕಾರ್ಯವನ್ನು ಕಂಡುಕೊಂಡರು. ಎಲ್ಲ ಕರ್ಮಗಳೂ ಜ್ಞಾನಾಗ್ನಿಯಲ್ಲಿ ಪವಿತ್ರಗೊಳ್ಳುತ್ತವೆ ಎಂದು ಕೃಷ್ಣ ಹೇಳಿದ್ದನ್ನು ಸಾವರ್ಕರ್ ಅವರು ಕೃತಿಯಲ್ಲಿ ತೋರಿಸಿಕೊಟ್ಟರು.
ಮಹಾರಾಷ್ಟ್ರದ ಸಹಸ್ರಾರು ಶೂರವೀರ ಸ್ವಾತಂತ್ರ್ಯ ಹೋರಾಟಗಾರರ ಶಿರೋಮಣಿಯಾದ ವೀರ ಸಾವರ್ಕರ್ ಅವರು ನಾಸಿಕ್ ಜಿಲ್ಲೆಯ, ಭಗೂರು ಎಂಬ ಚಿಕ್ಕ ಗ್ರಾಮದಲ್ಲಿ 1883ರ ಮೇ 28ನೇ ದಿನಾಂಕದಂದು ದಾಮೋದರಪಂತ್ ಹಾಗೂ ರಾಧಾಬಾಯಿ ಸಾವರ್ಕರ್ ದಂಪತಿಗಳ ಎರಡನೇ ಮಗನಾಗಿ ಜನಿಸಿದರು. ಚಾಫೇಕರ್ ಬಂಧುಗಳಂತೆಯೇ, ಸಾವರ್ಕರ್ ಬಂಧುಗಳಿಬ್ಬರೂ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಮಹಾನ್ ಸ್ವಾತಂತ್ರ್ಯ ವೀರರಾಗಿ ಅಮರರಾಗಿ ಉಳಿದರು.
ಇಂತಹಾ ದಿವ್ಯಾತ್ಮರು, ಧೀರರು, ಮೇಧಾವಿಗಳು ಹುಟ್ಟಿದ ದಿನ ಕೇವಲ ಜನ್ಮೋತ್ಸವವಲ್ಲ, ಭಾರತಮಾತೆಗೆ ಅದೇ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯೋತ್ಸವ.
(ಆಧಾರ: ಅನಂತ ಕಲ್ಲೋಳರ ವಿನಾಯಕ ದಾಮೋದರ ಸಾವರ್ಕರ್, ಭಾರತ-ಭಾರತಿ ಪುಸ್ತಕ ಸಂಪದ)
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #Savarkar #VDSavarkar #VinayakSavarkar #VinayakDamodarSavarkar #SavarkarJayanti







